ಬಡಗುತಿಟ್ಟು ಯಕ್ಷಗಾನ : ಪಾತ್ರದಾರಿಗಳಿಂದ ಪದ್ಯದ ಎತ್ತುಗಡೆ ಒಂದು ಜಿಜ್ಙಾಸೆ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶನಿವಾರ, ಸೆಪ್ಟೆ೦ಬರ್ 28 , 2013
|
ಯಕ್ಷಗಾನ ದಿನದಿಂದ ದಿನಕ್ಕೆ ತನ್ನ ಮೌಲ್ಯವನ್ನು ಕಳೆದು ಕೊಳ್ಳುತ್ತಿದೆ ಎಂಬ ಕೂಗು ಒಂದಡೆ ಯಾದರೆ ಪರಂಪರೆಯನ್ನು ಉಳಿಸುವ ಕೆಲಸ ಸಾಕಷ್ಟು ಅಲ್ಲಲ್ಲಿ ಆಗುತ್ತಿವೆ ಎಂಬ ಸಮಾದಾನ ಇನ್ನೊಂದಡೆ .
ಪರಂಪರೆ ಎಂದಾಗ ಎಲ್ಲವೂ ಕಲಾಪೂರ್ಣವೆನ್ನಲಾಗದು. ಯಾವುದು ಕಲೆಯ ಸೌಂದರ್ಯಕ್ಕೆ ಅಗತ್ಯವೊ, ಅದನ್ನು ಉಳಿಸಿ ಕೊಳ್ಳುವುದು ಅತ್ಯಗತ್ಯ. ಈ ಪರಂಪರೆಯ ಮೌಲ್ಯ ನಶಿಸುವುದಕ್ಕೆ ಕಲಾವಿದರಷ್ಟೆ ಕಾರಣರಲ್ಲ; ಪ್ರೆಕ್ಷಕರ ಪಾಲುದಾರಿಕೆಯೂ ಇದರಲ್ಲಿದೆ ಯಕ್ಷಗಾನ ರಂಗವಿಂದು ಕಳೆದುಕೊಳ್ಳುತ್ತಿರುವ "ಪದ್ಯದ ಎತ್ತುಗಡೆ" ಯ ಬಗ್ಗೆ ಒಂದಿಷ್ಟು ವಿವೇಚಿಸಿದಾಗ ಈ ವಿಷಯ ಸ್ಪಟ್ಟವಾಗುತ್ತದೆ
ಪದ್ಯದ ಎತ್ತುಗಡೆ ಎಂಬುದು ಪಾತ್ರಕ್ಕೆ ಜೀವ ತುಂಬುವ ಶಕ್ತಿಯನ್ನು ಹೊಂದಿದೆ. ಇದನ್ನು ತುಂಬಬೇಕಾದ ಕಲಾವಿದನಿಗೆ ರಾಗ-ತಾಳ-ಲಯಗಳ ಪ್ರಜ್ನೆ ಅಗತ್ಯ. ಇದಕ್ಕಿಂತ ಮಿಗಿಲಾಗಿ "ಶ್ರುತಿ ಪರಿಜ್ನಾನ" ಅತ್ತ್ಯಗತ್ಯ . ಭಾಗವತನಾದವನು ಯಾವ ಶ್ರುತಿಯಲ್ಲಿ ಹಾಡುತ್ತಾನೆಂಬುದನ್ನು ಗಮನಿಸಿ, ಅದೇ ಶ್ರುತಿಯಲ್ಲಿ -ಸ್ಠಾಯಿಯಲ್ಲಿ ಪದ್ಯ್ದ ಎತ್ತುಗಡೆಯಾದಾಗ ಒಂದು ಶ್ರುತಿ ಸಾಮರಸ್ಯದ ಗುಂಗು ಏರ್ಪಡುತ್ತದೆ . ಶ್ರುತಿ ಜ್ಯಾನವಿಲ್ಲದೆ ಹೋದರೆ ಎತ್ತುಗಡೆ ಪೇಲವವಾಗಿ ರಸಾಬಾಸವಾಗುತ್ತದೆ. ಚೆನ್ನಾಗಿ ಪದ್ಯದ ಎತ್ತುಗಡೆ ಮಾಡಬಲ್ಲವನು, ಭಾಗವತರ ಹಾಡಿಗೂ "ಉಠಾವ್" ನೀಡುತ್ತಾನೆ. ಭಾಗವತನೂ ಕಲಾವಿದ ಹಾಡಿದ ತನ್ಮಯತೆಯಲ್ಲೇ ಹಾಡಿ, ಕಲಾವಿದನಿಗೆ ಚೈತನ್ಯ ತುಂಬುತಾನೆ. ಕಲಾವಿದನಿಗೂ, ಭಾಗವತನಿಗೂ ಭಾವನಾತ್ಮಕ ಸಂಬಂದವಿದ್ದಾಗ ಮಾತ್ರ ಈ ನಿರೀಕ್ಷೆ ಸಾದ್ಯ. ಆಗ ಫ್ರೇಕ್ಷಕ ರಸಲೋಕ ವಿಹಾರಿಯಾಗುತ್ತಾನೆ.
|
ಯಲಗುಪ್ಪ ಸುಬ್ರಮಣ್ಯ ಹೆಗಡೆ
|
ಕೆರೆಮನೆ ಮಹಾಬಲ ಹೆಗಡೆ, ಬಳ್ಕೂರು ಕ್ರಷ್ಣಯಾಜಿ, ಐರೋಡಿ ಗೋವಿಂದಪ್ಪ, ನಗರ ಜಗನ್ನಾಥ ಶೆಟ್ಟಿ , ಕೋಟ ಸುರೇಶ , ಯಲಗುಪ್ಪ ಸುಬ್ರಮಣ್ಯ ಹೆಗಡೆ ಮುಂತಾದವರು ಪದ್ಯಎತ್ತುಗಡೆಯಲ್ಲಿ ತಮ್ಮದೇ ಆದ ಛಾಪನ್ನು ಒತ್ತಿದ್ದಾರೆ . ದಿ. ಕಾಳಿಂಗ ನಾವಡರ ಭಾಗವತಿಕೆಯಲ್ಲಿ "ಭೀಷ್ಮ ಪರ್ವ" ದ "ಶ್ರೀ ಮನೋಹರ ಸ್ವಾಮಿ ಪರಾಕು " ಪದ್ಯವನ್ನು ಬೆಳಗ್ಗಿನ ಜಾವದಲ್ಲಿ ಐರೋಡಿ ಗೋವಿಂದಪ್ಪನವರು ಕಪ್ಪು ಮೂರರ ಶ್ರುತಿಯಲ್ಲಿ ಎತ್ತುಗಡೆ ಮಾಡುತಿದ್ದುದನ್ನು ಪ್ರೇಕ್ಷಕರು ಇಂದಿಗೂ ಮೆಲಕು ಹಾಕುತಿದ್ದಾರೆ . ಹಾಗೇಯೆ ನೆಬ್ಬೂರು ಭಾಗವತರೋಂದಿಗೆ ಮಹಾಬಲ ಹೆಗಡೆಯವರೂ, ದಾರೇಶ್ವರರೊಂದಿಗೆ ಹಾಗು ಹೆರಂಜಾಲಿನೊಂದಿಗೆ ಯಲಗುಪ್ಪರವರ, ಮರಿಯಪ್ಪಾಚಾರೊಂದಿಗೆ ಐರೋಡಿಯವರ, ಹಾರಾಡಿ ಅಣ್ಣಪ್ಪ ಗಾಣಿಗರೊಂದಿಗೆ ಕೋಡಿಯವರ ಎತ್ತುಗಡೆಯ ಹೊಂದಾಣಿಕೆ ಸುಂದರವಾಗಿ ಮೂಡಿಬರುತಿತ್ತು.
ಎಷ್ಟೋ ವೇಳೆ ಪದ್ಯದ ಎತ್ತುಗಡೆ ಮಾಡುವವನಿಗೆ ರಾಗ-ತಾಳ-ಶ್ರುತಿ-ಲಯದ ಜ್ಣಾನವಿರುವುದಿಲ್ಲ. ಹೀಗಾದಲ್ಲಿ ಭಾಗವತ ಏನು ಮಾಡಬೇಕು? ಕೆಲವೊಮ್ಮೆ ಕಲಾವಿದ ಎತ್ತುಗಡೆ ಮಾಡಿದ, ಮಾಡುವ ರಾಗ ತಾಳಗಳೇ ಬೇರೆಯಾಗಿ ಬಾಗವತ ಮುಂದುವರಿಸುವ ಬಗೆಯೇ ಬೇರೆಯಾಗಿರುವುದು ಇಲ್ಲದಿಲ್ಲ . ಭಾಗವತರು ಮುಂದಿನ ಪದ್ಯವನ್ನು ಇದೇ ರಾಗದಲ್ಲಿ ಹಾಡುವುದೆಂದು ಯೋಚನೆಯಲ್ಲಿರುವಾಗ ಪಾತ್ರದಾರಿ ತಾನೊಂದು ರಾಗದಲ್ಲಿ ಎತ್ತುಗಡೆ ಮಾಡಿದರೆ ಹೊಂದಾಣಿಕೆ ಹೇಗೆ ಸಾದ್ಯ?. ಇಂಥ ವೇಳೆಯಲ್ಲಿ ಸಮರ್ಥ ಭಾಗವತ ಕಲಾವಿದನ ಮರ್ಯಾದೆ ಉಳಿಸುತ್ತಾನೆ.
ಯಾವ ಸನ್ನಿವೇಶದಲ್ಲಿ ಯಾವಪದ್ಯ ವನ್ನು ಎತುಗಡೆ ಮಾಡಬೇಕು, ಮಾಡಬಾರದು ಎಂಬ ಪ್ರಜ್ನೆ ಕಲಾವಿದನಿಗೆ ಅಗತ್ಯ. ಶ್ರುತಿ-ರಾಗ-ತಾಳ ಲಯ ಜ್ಝಾನವಿದೆಯಂಬ ಕಾರಣಕ್ಕೆ ಕಥಾ ನಿರೂಪಣೆಯ ಭಾಗವತರೇ ಹಾಡಬೇಕಾದ ಪದ್ಯವನ್ನು ಪಾತ್ರದಾರಿ ಎತ್ತುಗಡೆ ಮಾಡಬಾರದು. ಇತ್ತೀಚೆಗೆ ಸುಧನ್ವ ಪಾತ್ರದಾರಿಯೊಂಬ್ಬರು "ಆಗ ಸುದನ್ವನು ಬೇಗದಿ ರಣಕನುವಾಗುತ" ಎಂದರು. ಭೀಮ ಪಾತ್ರದಾರಿ ತಾಳಮದ್ದಳೆಯ ಅರ್ಥದಾರಿಯೊಬ್ಬರು "ಎಂದ ಮಾತನು ಕೇಳಿ ಭೀಮನು" ಎಂದು ಬಿಟ್ಟರು. ಹೀಗೆ ಕವಿವಾಣಿಯಾದ "ಕುಶನೆ ಕೇಳ್ " "ಕೇಳು ಜನಮೇಜಯನೆ " "ಬಂದನು ದೇವರ ದೇವ " "ಬಾನು ಸುತನಾಕ್ಷಣದಿ " ಮುಂತಾದ ಪದ್ಯ ಗಳನ್ನು ಆಯಾ ಪಾತ್ರದಾರಿಗಳು ಎತ್ತಿದಾಗ ರಸಾಬಾಸವಾಗದಿರದೆ?
ಹಳೆಯ ಪ್ರಸಂಗ ಗಳಿಗೆ ಇಂಥಹದ್ದೆ ನೆಡೆಯೆಂಬುದಿದೆ. ಇಂಥ್ಹ ಹಾಡನ್ನು ಇಂಥಹದ್ದೆ ರಾಗದಲ್ಲಿ ವೇಗ ದಲ್ಲಿ ಹಾಡಬೇಕೆಂಬ ನಿಯಮವಿತ್ತು. ಆಗ ಎತ್ತುಗಡೆ ಸಮಸ್ಯೆಯಾಗಿರಲಿಲ್ಲ. ಹೊಸ ಪ್ರಸಂಗಗಳಲ್ಲಿ ನಾವಿದನ್ನು ನೀರಿಕ್ಷಿಸಲಾಗದು. ಹೀಗಾಗಿ ಎತ್ತುಗಡೆ ಮಾಯವಾಗುತ್ತಾ ಬಂದಿದೆ. ಒಬ್ಬಿಬ್ಬ ಕಲಾವಿದರಲ್ಲಿ "ಪದ್ಯದ ಎತ್ತುಗಡೆ" ಪ್ರೇಕ್ಷಕ ನಿರೀಕ್ಷಿಸುವ ಅವಿಬಾಜ್ಯ ಅಂಗ ಇಲ್ಲಿ ಒಂದು ರಸಸ್ರಷ್ಟಿಯಾಗುತ್ತದೆ. ಅಲ್ಲದೆ ಕೆಲವು ಪ್ರಸಂಗಗಳಲ್ಲಿ ಎತ್ತುಗೆದೆಗೆ ಬೇಕಾದ ಸೊಗಸಾದ ಪದ್ಯಗಳಿವೆ. ಬಬ್ರುವಾಹನದ "ಹಂಸಕೇತನಾದಿಗಳೆಲ್ಲ ಕೇಳಿ" ಕರ್ಣಾರ್ಜುಣದ "ವೀರ ವ್ರಷಸೇನಾಖ್ಯ ನಳಿದನೇ" "ಯಾದವೋತ್ತಮ ಲಾಲಿಸಿ ಕೇಳು" ಬೀಷ್ಮವಿಜಯದ "ಸರಸಿಜಾಂಬಕಿಯರೆ ಕೇಳಿ " ಇತ್ಯಾದಿ. . . . ಇತ್ಯಾದಿ.
ಕೆಲವೊಮ್ಮೆ ಭಾಗವತನನ್ನು "ಗೊತ್ತಿಲ್ಲದವ "ನೆಂದು ತೋರಿಸಲು ಪದ್ಯದ ಎತ್ತುಗಡೆ ಮಾಡುವ ಇಡೀ ಪದ್ಯವನ್ನು ಹಾಡುವ ಕಲಾವಿದರನ್ನು ಕಾಣುತ್ತೇವೆ. ಇಡೀ ಪದ್ಯವನ್ನು ಹಾಡಲು ಎಡೆಮಾಡಿಕೊಟ್ಟು ಪ್ರೋತ್ಸಾಹಿಸುವ ಭಾಗವತರನ್ನೂ ಕಾಣುತ್ತೆವೆ. ಪದ್ಯದ ಎತ್ತುಗಡೆಯಲ್ಲಿ ಕಲಾವಿದನಿಗೂ-ಭಾಗವತನಿಗೂ ಹಿತ ಸಂಬಂದವಿರಬೇಕಾದುದು ತೀರಾ ಅಗತ್ಯ. ಭಾಗವತನಿಗೂ ಕಲಾವಿದನಿಗೂ ಈ ಎಚ್ಚರ ವಿದ್ದಲ್ಲಿ ಪದ್ಯದ ಎತ್ತುಗಡೆ ಪ್ರದರ್ಶನಕ್ಕೆ ಕಳೆ ಏರಿಸಬಲ್ಲದು. ಕಲಾವಿದರೂ ಭಾಗವತರೂ ಪರಸ್ಪರ ಸಾಮರಸ್ಯದಿಂದ ಇದನ್ನು ಉಳಿಸುತ್ತಾರೆಂಬ ನಿರೀಕ್ಷೆಯಲ್ಲಿರೋಣವೇ ?
|
|
|